Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ಸವಾಲುಗಳು ಸಾವಿರ ಗೆಲುವು ಭರಪೂರ

$
0
0

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಸಾ.ರಾ.ಗೋವಿಂದ್ ಆಯ್ಕೆ ಆಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಅವರು ಮುಂದೆ ಹಲವು ಸವಾಲುಗಳಿವೆ. ಈ ಕುರಿತಾದ ಲವಲವಿಕೆಯ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ.

* ಶರಣು ಹುಲ್ಲೂರು
ಕರ್ನಾಟಕಕ್ಕೆ ಮತ್ತು ಕನ್ನಡ ಸಿನಿಮಾ ರಂಗಕ್ಕೆ ಸಾ.ರಾ.ಗೋವಿಂದ್ ಕೊಡುಗೆ ಅಪಾರ. ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾಗಿ, ಅನೇಕ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ನಾಡು ನುಡಿ ಉಳಿಸಲು ಅನೇಕ ಚಳವಳಿಗಳನ್ನು ಮಾಡಿದ್ದಾರೆ. ಡಬ್ಬಿಂಗ್ ವಿರೋಧದ ಧ್ವನಿಯಲ್ಲಿ ಪ್ರಮುಖವಾಗಿ ಕೇಳಿಸುವ ಹೆಸರು ಗೋವಿಂದ್ ಅವರದ್ದು. ಇದೇ ಶನಿವಾರ (ಅ.31) ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ, ಇವರ ಮುಂದೆ ಸಾಕಷ್ಟು ಸವಾಲುಗಳಿವೆ. ಈ ಕುರಿತಾದ ಮಾತುಕತೆ ಇಲ್ಲಿದೆ.

* ಅಧ್ಯಕ್ಷ ಸ್ಥಾನದ ನಿಮ್ಮ ಗೆಲುವು ನಿರೀಕ್ಷಿತವಾಗಿತ್ತಾ? ನಿರೀಕ್ಷೆಗಿಂತ ನನಗೆ ಆತ್ಮ ವಿಶ್ವಾಸವಿತ್ತು. 20 ವರ್ಷದಿಂದ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಒಳ್ಳೆಯ ಕೆಲಸ ಮಾಡಿದ್ದೇನೆ. ಹೀಗಾಗಿಯೇ ನಾನು ಗೆಲ್ಲುತ್ತೇನೆ ಅಂತ ಅನಿಸಿತ್ತು. ಆದರೆ, ನಮ್ಮ ತಂಡ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂಬ ವಿಶ್ವಾಸ ಇರಲಿಲ್ಲ. ಅದೂ ಸುಳ್ಳಾಯಿತು. ಮೂವತ್ತು ವರ್ಷದಿಂದ ನಾನು ಕನ್ನಡ ಪರ ಹೋರಾಟ ಮಾಡಿದ್ದೇನೆ. ಆ ಹೋರಾಟಕ್ಕೆ ಈ ಮೂಲಕ ನನ್ನ ಮಿತ್ರರು ಗೌರವ ಸಲ್ಲಿಸಿದ್ದಾರೆ.

* ಈ ಬಾರಿಯ ಚುನಾವಣೆ ಅಷ್ಟೊಂದು ರಂಗೇರಿದ್ದು ಯಾಕೆ? ಇದು ಸಾಂಸ್ಕೃತಿಕ ಕ್ಷೇತ್ರ. ಈ ರೀತಿಯ ಪೈಪೋಟಿ ಇರಬಾರದು. ಜಿದ್ದಾಜಿದ್ದಿ ಬಿದ್ದು ಚುನಾವಣೆಯಲ್ಲಿ ಗೆಲ್ಲಲೇಬೇಕು ಅಂದುಕೊಂಡಿದ್ದರೆ ಹತ್ತು ವರ್ಷದ ಹಿಂದೆಯೇ ನಾನು ಅಧ್ಯಕ್ಷನಾಗಬೇಕಿತ್ತು. ಆದರೆ, ಹಿರಿಯರನ್ನು ಗೌರವಿಸಬೇಕು ಅನ್ನುವ ಕಾರಣಕ್ಕೆ ಸುಮ್ಮನಿದ್ದೆ. ಈಗ ಅನುಭವ ಮತ್ತು ವಯಸ್ಸು ಎರಡೂ ಬೆರೆತಿದೆ. ಅಧ್ಯಕ್ಷನಾಗಬೇಕು ಅಂತ ಹಲವರಿಂದ ಒತ್ತಡವೂ ಬಂತು. ಅವರ ಪ್ರೀತಿಯ ಒತ್ತಾಸೆಗೆ ಚುನಾವಣೆ ಎದುರಿಸಿದೆ. ಅವರೇ ಗೆಲ್ಲಿಸಿದರು. ನನ್ನ ವಿರುದ್ಧ ನಿಂತವರು ಯಾವತ್ತಿಗೂ ನನ್ನ ಸ್ನೇಹಿತರು. ಎಂದಿಗೂ ಅವರನ್ನು ವೈರಿಯಂತೆ ಕಾಣಲಾರೆ.

* ನಿಮ್ಮುಂದೆ ಹಲವು ಸವಾಲುಗಳಿವೆ. ಅವುಗಳನ್ನು ಹೇಗೆ ಸಮರ್ಥವಾಗಿ ನಿಭಾಯಿಸುತ್ತೀರಿ? ನನ್ನ ಮುಂದೆ ಅನೇಕ ಸವಾಲುಗಳು ಇರುವುದು ನಿಜ. ಅಷ್ಟೇ ಅನುಭವವೂ ಇದೆ. ಹೋರಾಟದ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಅವುಗಳ ನಿವಾರಣೆಗೂ ಕಷ್ಟಪಟ್ಟಿದ್ದೇನೆ. ಸಿನಿಮಾ ರಂಗದಲ್ಲಿ ಅದೆಂಥ ಸವಾಲುಗಳಿದ್ದರೂ ಅಧ್ಯಕ್ಷನಾಗಿ ಎದುರಿಸಲು ಸಿದ್ಧನಿದ್ದೇನೆ.

* ಸಿನಿಮಾ ಕುಟುಂಬ ಒಂದೇ ಅಲ್ಲ ಎನ್ನುವುದು ಪದೇ ಪದೇ ಸಾಬೀತು ಆಗುತ್ತಿದೆ. ನಿಮ್ಮಿಂದ ಒಟ್ಟಾಗಿಸುವ ಪ್ರಯತ್ನ ಆಗತ್ತಾ? ಇನ್ನು ಮುಂದೆ ಅಂತ ಯಾವ ಮಾತೂ ಕೇಳಿ ಬರುವುದಿಲ್ಲ. ವೈಯಕ್ತಿಕವಾಗಿ ಏನೇ ಸಮಸ್ಯೆ ಇದ್ದರೂ, ಸಿನಿಮಾ ರಂಗಕ್ಕಾಗಿ ಎಲ್ಲರೂ ಒಟ್ಟಾಗಬೇಕು. ನಾನೇ ಎಲ್ಲರ ಜತೆ ಮಾತಾಡಿ, ಅದನ್ನು ಸರಿ ಮಾಡುತ್ತೇನೆ. ನನ್ನ ಮಾತನ್ನು ಎಲ್ಲರೂ ಕೇಳುತ್ತಾರೆ ಎಂಬ ವಿಶ್ವಾಸವಂತೂ ನನಗಿದೆ.

* ಡಬ್ಬಿಂಗ್ ಕುರಿತಾದ ನಿಮ್ಮ ನಿಲುವು ಈಗ ಏನಾಗಿರುತ್ತದೆ? ಡಬ್ಬಿಂಗ್ ವಿಷಯ ಸದ್ಯ ಕೋರ್ಟ್‌ನಲ್ಲಿದೆ. ಅಧ್ಯಕ್ಷನಾಗಿ ನಾನು ಏನೇ ಮಾತಾಡಿದರೂ, ಅದು ಮತ್ತೊಂದು ಅರ್ಥ ಕಲ್ಪಿಸುತ್ತದೆ. ಡಬ್ಬಿಂಗ್ ಕುರಿತಾಗಿಯೇ ವಾಣಿಜ್ಯ ಮಂಡಳಿಗೊಂದು ನಿಲುವಿದೆ. ಅದಕ್ಕೊಂದು ಬೈಲಾ ಇದೆ. ಬೈಲಾ ಹೇಗೆ ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುವೆ. ನನ್ನ ಅವಧಿ ಮುಗಿಸುವೆ. ಡಬ್ಬಿಂಗ್ ಕುರಿತಾದ ಹೋರಾಟಕ್ಕೆ ಕನ್ನಡ ಪರ ಚಿಂತಕರು ಇದ್ದಾರೆ. ಅದನ್ನು ಅವರು ನೋಡಿಕೊಳ್ಳುತ್ತಾರೆ.

* ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ ಮತ್ತು ಡಬ್ಬಿಂಗ್ ವಾಣಿಜ್ಯ ಮಂಡಳಿಯ ಕುರಿತಾಗಿ ಏನು ಹೇಳುತ್ತೀರಿ? ಮಾನ್ಯತೆ ಇಲ್ಲದೇ ಇರುವ ವಾಣಿಜ್ಯ ಮಂಡಳಿಯ ಕುರಿತಾಗಿ ಏನು ಹೇಳಲಿ? ಈಗ ಡಬ್ಬಿಂಗ್ ಕುರಿತಾಗಿ ಯಾರಿಗೂ ಆಸಕ್ತಿ ಇಲ್ಲ. ಡಬ್ಬಿಂಗ್ ಸಿನಿಮಾವನ್ನು ಯಾರೂ ಇಷ್ಟ ಪಡುತ್ತಿಲ್ಲ. ನಮ್ಮಲ್ಲಿರುವುದು ಒಂದೇ ವಾಣಿಜ್ಯ ಮಂಡಳಿ. ಯಾರಿಗೆ ಏನೇ ಸಮಸ್ಯೆ ಇದ್ದರೂ, ನನ್ನೊಂದಿಗೆ ಚರ್ಚಿಸಲಿ. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ.

* ಮಲ್ಟಿಪ್ಲಕ್ಸ್ ಥಿಯೇಟರ್‌ನಿಂದ ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ ಅನ್ನುವ ಕೂಗಿದೆ. ಅದನ್ನು ನಿಮ್ಮಿಂದ ಕಂಟ್ರೋಲ್ ಮಾಡಲು ಸಾಧ್ಯವಾ? ನಮ್ಮ ಅಸ್ವಿತ್ವದ ಪ್ರಶ್ನೆ ಬಂದಾಗ, ಎದ್ದು ನಿಲ್ಲಲೇಬೇಕಾಗುತ್ತದೆ. ಮಲ್ಪಿಪ್ಲಕ್ಸ್ ಹಾವಳಿಯ ಬಗ್ಗೆ ಅನೇಕರು ಮಾತಾಡಿದ್ದಾರೆ. ಅವರು ಕನ್ನಡ ಸಿನಿಮಾವನ್ನು ನೋಡುವ ರೀತಿಯ ಬಗ್ಗೆ ನನಗೂ ಗೊತ್ತಿದೆ. ನಮ್ಮ ನೆಲದ ವಿದ್ಯುತ್, ನೀರು ಪಡೆದುಕೊಂಡು ಅವರು ನಮಗೆ ಮೋಸ ಮಾಡುತ್ತಾರೆ ಅನ್ನುವುದನ್ನು ಸಹಿಸಿಕೊಳ್ಳಲು ಅಸಾಧ್ಯ. ಇದನ್ನು ಮುಖ್ಯಮಂತ್ರಿಗಳ ಮತ್ತು ವಾರ್ತಾ ಮಂತ್ರಿಗಳ ಗಮನಕ್ಕೆ ತಂದು, ಅವರನ್ನು ಕಂಟ್ರೋಲ್ ಮಾಡುವ ವ್ಯವಸ್ಥೆ ಮಾಡುವೆ. ಇದರಲ್ಲಿ ರಾಜಿಯ ಮಾತೇ ಇಲ್ಲ.


Viewing all articles
Browse latest Browse all 12761


<script src="https://jsc.adskeeper.com/r/s/rssing.com.1596347.js" async> </script>